ಮಲಾಕಿಯನು
ಗ್ರಂಥಕರ್ತೃತ್ವ
ಮಲಾಕಿ 1:1 ನೇ ವಚನವು ಪ್ರವಾದಿಯಾದ ಮಲಾಕಿಯನು ಪುಸ್ತಕದ ಗ್ರಂಥಕರ್ತನೆಂದು ಗುರುತಿಸುತ್ತದೆ. ಹೀಬ್ರೂನಲ್ಲಿ, “ದೂತನು” ಎಂಬ ಅರ್ಥವುಳ್ಳ ಪದದಿಂದ ಈ ಹೆಸರು ಬಂದಿದೆ. ಇದು ಕರ್ತನ ಪ್ರವಾದಿಯಾಗಿ ದೇವರ ಸಂದೇಶವನ್ನು ದೇವಜನರಿಗೆ ಪ್ರಕಟಿಸುವ ಮಲಾಕಿಯ ಕೆಲಸವನ್ನು ಸೂಚಿಸುತ್ತದೆ. ಇದನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು, “ಮಲಾಕಿಯನು” ನಮಗೆ ಈ ಪುಸ್ತಕವನ್ನು ತಂದ ದೂತನಾಗಿದ್ದಾನೆ, ಮತ್ತು ಅವನ ಸಂದೇಶವೇನೆಂದರೆ ದೇವರು ಭವಿಷ್ಯದಲ್ಲಿ ಮತ್ತೊಬ್ಬ ದೂತನನ್ನು ಕಳುಹಿಸುತ್ತಾನೆ, ಅವನು ಮಹಾನ್ ಪ್ರವಾದಿಯಾದ ಎಲೀಯನಾಗಿದ್ದು ಕರ್ತನ ದಿನಕ್ಕಿಂತ ಮುಂಚೆ ಹಿಂದಿರುಗಿ ಬರುವನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 430 ರ ಕಾಲದಲ್ಲಿ ಬರೆದಿರಬಹುದು.
ಇದು ಸೆರೆವಾಸದ ನಂತರದ ಪುಸ್ತಕವಾಗಿದೆ, ಅಂದರೆ ಬಾಬಿಲೋನಿನಲ್ಲಿನ ಸೆರೆಯಿಂದ ಹಿಂದಿರುಗಿದ ನಂತರ ಇದನ್ನು ಬರೆಯಲಾಗಿದೆ.
ಸ್ವೀಕೃತದಾರರು
ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಯೆಹೂದ್ಯರಿಗಿರುವ ಪತ್ರವಾಗಿದೆ ಮತ್ತು ಎಲ್ಲೆಡೆಯಿರುವ ದೇವರ ಜನರಿಗಿರುವ ಸಾಮಾನ್ಯ ಪತ್ರವಾಗಿದೆ.
ಉದ್ದೇಶ
ದೇವರು ತನ್ನ ಜನರಿಗೆ ಸಹಾಯ ಮಾಡುವುದಕ್ಕಾಗಿ ಮಾಡಬಹುದಾದ ಎಲ್ಲವನ್ನೂ ಮಾಡುವನು ಎಂದು ಜನರಿಗೆ ನೆನಪಿಸಲು ಮತ್ತು ದೇವರು ನ್ಯಾಯಾಧಿಪತಿಯಾಗಿ ಬರುವಾಗ ಅವರ ಕೆಟ್ಟತನಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಲೆಕ್ಕ ಕೇಳುವನು ಎಂದು ಜನರಿಗೆ ನೆನಪಿಸಲು, ಒಡಂಬಡಿಕೆಯ ಆಶೀರ್ವಾದಗಳು ನೆರವೇರುವುದಕ್ಕಾಗಿ ಜನರು ತಮ್ಮ ಕೆಟ್ಟತನದಿಂದ ಪಶ್ಚಾತ್ತಾಪಪಡಬೇಕೆಂದು ಜನರನ್ನು ಹುರಿದುಂಬಿಸಲು ಬರೆದ ಪುಸ್ತಕವಾಗಿದೆ. ದೇವರ ಕಡೆಗೆ ತಿರುಗುವಂತೆ ಜನರಿಗೆ ಹೇಳುವುದಕ್ಕಾಗಿ ಇದು ಮಲಾಕಿಯನ ಮೂಲಕ ಉಂಟಾದ ದೇವರ ಎಚ್ಚರಿಕೆಯಾಗಿತ್ತು. ಹಳೆಯ ಒಡಂಬಡಿಕೆಯ ಅಂತಿಮ ಪುಸ್ತಕವು ಮುಕ್ತಾಯವಾಗುವಾಗ, ದೇವರ ನ್ಯಾಯದ ಘೋಷಣೆ ಮತ್ತು ಬರುವ ಮೆಸ್ಸೀಯನ ಮೂಲಕ ಉಂಟಾಗುವ ಆತನ ಪುನಃಸ್ಥಾಪನೆಯ ವಾಗ್ದಾನವು ಇಸ್ರಾಯೇಲ್ಯರ ಕಿವಿಗಳಲ್ಲಿ ಮೊಳಗುತ್ತಿದೆ.
ಮುಖ್ಯಾಂಶ
ಬಹಿರಾಚರಣೆಯ ಖಂಡನೆ
ಪರಿವಿಡಿ
1. ದೇವರನ್ನು ಗೌರವಿಸುವಂತೆ ಯಾಜಕರಿಗೆ ಪ್ರಬೋಧನೆ — 1:1-2:9
2. ಯೆಹೂದವು ನಂಬಿಗಸ್ತವಾಗಿರಬೇಕೆಂಬ ಪ್ರಬೋಧನೆ — 2:10-3:6
3. ದೇವರ ಕಡೆಗೆ ಹಿಂತಿರುಗುವಂತೆ ಯೆಹೂದಕ್ಕೆ ಪ್ರಬೋಧನೆ — 3:7-4:6