1 ಪೇತ್ರನು
ಗ್ರಂಥಕರ್ತೃತ್ವ
ಆರಂಭಿಕ ವಚನವು ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಗ್ರಂಥಕರ್ತನಾಗಿದ್ದಾನೆಂದು ಸೂಚಿಸುತ್ತದೆ. ಅವನು ತನ್ನನ್ನು ಯೇಸು ಕ್ರಿಸ್ತನ ಅಪೊಸ್ತಲನೆಂದು ಕರೆದುಕೊಂಡನು (1 ಪೇತ್ರ. 1:1). ಕ್ರಿಸ್ತನ ಸಂಕಟದ ಬಗ್ಗೆ ಪದೇ ಪದೇ ಉಲ್ಲೇಖಿಸುವ ಆತನ ಉಲ್ಲೇಖಗಳು (2: 21-24; 3:18; 4:1; 5:1), ಸಂಕಟವನ್ನು ಅನುಭವಿಸುತ್ತಿರುವ ಸೇವಕನ ಚಿತ್ರಣವು ಅವನ ಮನಸ್ಸಿನಲ್ಲಿ ಆಳವಾಗಿ ಪ್ರಭಾವಬೀರಿದೆ ಎಂದು ತೋರಿಸುತ್ತವೆ. ಅವನು ಮಾರ್ಕನನ್ನು ತನ್ನ “ಮಗ” ಎಂದು ಕರೆದನು (5:13), ಈ ಯುವಕನ ಮತ್ತು ಅವನ ಕುಟುಂಬದ ಮೇಲಿರುವ ತನ್ನ ಮಮತೆಯನ್ನು ನೆನಪಿಸಿಕೊಂಡನು (ಅ.ಕೃ. 12:12). ಈ ಸಂಗತಿಗಳು ಅಪೊಸ್ತಲನಾದ ಪೇತ್ರನು ಈ ಪತ್ರಿಕೆಯನ್ನು ಬರೆದಿದ್ದಾನೆ ಎಂಬ ಕಲ್ಪನೆಗೆ ಸ್ವಾಭಾವಿಕವಾಗಿ ಕೊಂಡ್ಯೊಯುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60-64 ರ ನಡುವೆ ಬರೆಯಲ್ಪಟ್ಟಿದೆ.
5:13 ರಲ್ಲಿ ಗ್ರಂಥಕರ್ತನು ಬಾಬಿಲೋನಿನಲ್ಲಿರುವ ಸಭೆಯಿಂದ ವಂದನೆಯನ್ನು ಹೇಳುತ್ತಿದ್ದಾನೆ.
ಸ್ವೀಕೃತದಾರರು
ಆಸ್ಯ ಸೀಮೆಯ ಉತ್ತರದ ಪ್ರದೇಶಗಳಲ್ಲಿ ಚದುರಿರುವ ಕ್ರೈಸ್ತರ ಗುಂಪಿಗೆ ಪೇತ್ರನು ಈ ಪತ್ರಿಕೆಯನ್ನು ಬರೆದನು. ಬಹುಶಃ ಯೆಹೂದ್ಯರು ಮತ್ತು ಅನ್ಯಜನರು ಒಳಗೊಂಡಿದ್ದ ಜನರ ಸಮೂಹಕ್ಕೆ ಅವನು ಬರೆದನು.
ಉದ್ದೇಶ
ತಮ್ಮ ನಂಬಿಕೆಗಾಗಿ ಹಿಂಸೆಯನ್ನು ಅನುಭವಿಸುತ್ತಿದ್ದ ತನ್ನ ಓದುಗರನ್ನು ಉತ್ತೇಜಿಸುವುದಕ್ಕಾಗಿ ಇದನ್ನು ಬರೆಯುತ್ತಿದ್ದೇನೆ ಎಂಬ ಕಾರಣವನ್ನು ಪೇತ್ರನು ತಿಳಿಸಿದನು. ಅವರು ದೇವರ ಕೃಪೆಯು ಕ್ರೈಸ್ತತ್ವದಲ್ಲಿ ಮಾತ್ರವೇ ದೊರಕುತ್ತದೆ ಎಂಬುದರ ಕುರಿತು ಸಂಪೂರ್ಣವಾಗಿ ಭರವಸೆಯುಳ್ಳವರಾಗಿರಬೇಕೆಂದು ಮತ್ತು ಆದ್ದರಿಂದ ನಂಬಿಕೆಯನ್ನು ಬಿಟ್ಟುಬಿಡಬಾರದು ಎಂದು ಅವನು ಬಯಸಿದ್ದನು. ಇದು 1 ಪೇತ್ರ 5:12 ರಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ, ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು ಸಂಕ್ಷೇಪವಾಗಿ ಬರೆದಿದ್ದೇನೆ. ಅದರಲ್ಲಿ ದೃಢವಾಗಿ ನಿಂತುಕೊಳ್ಳಿರಿ. ಅವನ ಓದುಗಾರರಲ್ಲಿ ಈ ಹಿಂಸೆಯು ವ್ಯಾಪಕವಾಗಿ ಹರಡಿತ್ತು. ಉತ್ತರ ಆಸ್ಯ ಸೀಮೆಯಾದ್ಯಂತ ಕ್ರೈಸ್ತರಿಗೆ ಉಂಟಾದ ಹಿಂಸೆಯನ್ನು 1 ಪೇತ್ರನ ಪತ್ರಿಕೆಯು ಪ್ರತಿಫಲಿಸುತ್ತದೆ.
ಮುಖ್ಯಾಂಶ
ಸಂಕಟಕ್ಕೆ ಸ್ಪಂದನೆ
ಪರಿವಿಡಿ
1. ವಂದನೆಗಳು — 1:1-2
2. ದೇವರ ಕೃಪೆಗಾಗಿ ಆತನಿಗೆ ಸ್ತೋತ್ರ — 1:3-12
3. ಪರಿಶುದ್ಧ ಜೀವಿತಕ್ಕಾಗಿ ಪ್ರಬೋಧನೆಗಳು — 1:13-5:12
4. ಅಂತಿಮ ವಂದನೆಗಳು — 5:13-14