ಯೆಹೆಜ್ಕೇಲನು
ಗ್ರಂಥಕರ್ತೃತ್ವ
ಈ ಪುಸ್ತಕವು ಬೂಜಿಯ ಮಗನು, ಯಾಜಕನು ಮತ್ತು ಪ್ರವಾದಿಯು ಆದ ಯೆಹೆಜ್ಕೇಲನಿಗೆ ಸೇರಿದುದೆಂದು ಹೇಳಲಾಗುತ್ತದೆ. ಅವನು ಯೆರೂಸಲೇಮಿನಲ್ಲಿ ಯಾಜಕನ ಕುಟುಂಬದಲ್ಲಿ ಬೆಳೆದನು ಮತ್ತು ಸೆರೆವಾಸದ ಸಮಯದಲ್ಲಿ ಬಾಬೆಲಿನಲ್ಲಿದ್ದ ಯೆಹೂದ್ಯರೊಂದಿಗೆ ವಾಸಿಸುತ್ತಿದ್ದನು. ಯೆಹೆಜ್ಕೇಲನ ಯಾಜಕತ್ವದ ವಂಶಾವಳಿಯು ಅವನ ಪ್ರವಾದಿಯ ಸೇವೆಯಲ್ಲಿ ವಿಜೃಂಭಿಸುತ್ತದೆ, ದೇವಾಲಯ, ಯಾಜಕತ್ವ, ಕರ್ತನ ಮಹಿಮೆ, ಮತ್ತು ಯಜ್ಞದ ಪದ್ಧತಿ ಮುಂತಾದ ವಿಷಯಗಳಲ್ಲಿ ಅವನು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 593-570 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಯೆಹೆಜ್ಕೇಲನು ಬಾಬೆಲನಿಂದ ಬರೆದನು, ಆದರೆ ಅವನ ಪ್ರವಾದನೆಗಳು ಇಸ್ರಾಯೇಲ್, ಐಗುಪ್ತ, ಮತ್ತು ನೆರೆಹೊರೆಯ ಹಲವಾರು ದೇಶಗಳ ಕುರಿತಾಗಿದ್ದವು.
ಸ್ವೀಕೃತದಾರರು
ಬಾಬೆಲಿನಲ್ಲಿ ಮತ್ತು ಸ್ವದೇಶದಲ್ಲಿದ್ದ ಇಸ್ರಾಯೇಲ್ಯರು ಮತ್ತು ಸತ್ಯವೇದದ ಓದುಗಾರರೆಲ್ಲರು.
ಉದ್ದೇಶ
ಅತೀವ ಪಾಪ ಮತ್ತು ಸಂಪೂರ್ಣವಾಗಿ ಹತಾಶರಾಗಿದ್ದ ತನ್ನ ಕಾಲದ ತಲೆಮಾರಿನವರಿಗೆ ಯೆಹೆಜ್ಕೇಲನು ಸೇವೆಮಾಡುತ್ತಿದ್ದನು. ಅವನು ತನ್ನ ಪ್ರವಾದನಾ ಸೇವೆಯ ಮೂಲಕ ಅವರನ್ನು ತಕ್ಷಣವೇ ಪಶ್ಚಾತ್ತಾಪಕ್ಕೆ ಮತ್ತು ಭವಿಷ್ಯದಲ್ಲಿ ಆತ್ಮವಿಶ್ವಾಸಕ್ಕೆ ತರಲು ಪ್ರಯತ್ನಿಸಿದನು. ದೇವರು ಮಾನವ ಸಂದೇಶಕರ ಮೂಲಕ ಕ್ರಿಯೆ ಮಾಡುತ್ತಾನೆ, ಸೋಲು ಮತ್ತು ಹತಾಶೆಯಲ್ಲಿಯೂ ಸಹ ದೇವರ ಜನರು ದೇವರ ಸಾರ್ವಭೌಮತ್ವವನ್ನು ದೃಢಪಡಿಸಿಕೊಳ್ಳಬೇಕು, ದೇವರ ವಾಕ್ಯವು ಎಂದಿಗೂ ವಿಫಲವಾಗುವುದಿಲ್ಲ, ದೇವರು ಎಲ್ಲೆಡೆಯು ಇದ್ದಾನೆ ಮತ್ತು ಎಲ್ಲೆಡೆಯು ಆತನನ್ನು ಆರಾಧಿಸಬಹುದು ಎಂದು ಅವನು ಬೋಧಿಸಿದನು. ಯೆಹೆಜ್ಕೇಲನ ಪುಸ್ತಕವು ನಾವು ಕಳೆದುಹೋಗಿದ್ದೇವೆ ಎಂದು ಭಾವಿಸುವಂಥ ಆ ಕಗ್ಗತ್ತಲೆಯ ಕಾಲದಲ್ಲಿ ಕರ್ತನನ್ನು ಹುಡುಕಿರಿ, ನಮ್ಮ ಜೀವನವನ್ನು ಪರೀಕ್ಷಿಸಿಕೊಳ್ಳಿರಿ, ಮತ್ತು ನಾವು ಏಕ ಸತ್ಯ ದೇವರೊಂದಿಗೆ ಒಂದಾಗಿರಬೇಕು ಎಂದು ನಮಗೆ ನೆನಪಿಸುತ್ತದೆ.
ಮುಖ್ಯಾಂಶ
ಕರ್ತನ ಮಹಿಮೆ
ಪರಿವಿಡಿ
1. ಯೆಹೆಜ್ಕೇಲನ ಕರೆ — 1:1-3:27
2. ಯೆರೂಸಲೇಮ್, ಯೆಹೂದ ಮತ್ತು ದೇವಾಲಯದ ವಿರುದ್ಧ ಪ್ರವಾದನೆಗಳು — 4:1-24:27
3. ದೇಶಗಳ ವಿರುದ್ಧ ಪ್ರವಾದನೆಗಳು — 25:1-32:32
4. ಇಸ್ರಾಯೇಲ್ಯರಿಗೆ ಸಂಬಂಧಿಸಿದ ಪ್ರವಾದನೆಗಳು — 33:1-39:29
5. ಪುನಃಸ್ಥಾಪನೆಯ ದರ್ಶನ — 40:1-48:35