ಯೆರೆಮೀಯನು
ಗ್ರಂಥಕರ್ತೃತ್ವ
ಯೆರೆಮೀಯನು, ಅವನ ಬರಹಗಾರನಾದ ಬಾರೂಕನೊಂದಿಗೆ ಸೇರಿ ಬರೆದದ್ದು. ಯಾಜಕ ಮತ್ತು ಪ್ರವಾದಿಯಾಗಿ ಸೇವೆ ಸಲ್ಲಿಸಿದ ಯೆರೆಮೀಯನು, ಹಿಲ್ಕೀಯ ಎಂಬ ಯಾಜಕನ ಮಗನಾಗಿದ್ದನು (ಮಹಾಯಾಜಕನಲ್ಲ, 2 ಅರಸು 22:8. ಅವನು ಅನಾತೋತ್ ಎಂಬ ಚಿಕ್ಕ ಗ್ರಾಮದಿಂದ ಬಂದವನು ಯೆರೆ 1:1). ಬಾರೂಕನೆಂಬ ಹೆಸರುಳ್ಳ ಬರಹಗಾರನು ಅವನಿಗೆ ಸೇವೆಯಲ್ಲಿ ಸಹಾಯ ಮಾಡುತ್ತಿದ್ದನು, ಯೆರೆಮೀಯನು ಹೇಳುತ್ತಿದ್ದನು ಮತ್ತು ಅವನು ಬರೆದಿಡುತ್ತಿದ್ದನು ಮತ್ತು ಪ್ರವಾದಿಯ ಸಂದೇಶಗಳಿಂದ ಸಂಕಲಿಸಿದ ಬರಹಗಳನ್ನು ಕಾಪಾಡುತ್ತಿದ್ದನು (ಯೆರೆ 36:4,32; 45:1). ಯೆರೆಮೀಯನು ಕಣ್ಣೀರಿನ ಪ್ರವಾದಿಯೆಂದು ಹೆಸರುವಾಸಿಯಾಗಿದ್ದನು (ಯೆರೆ 9:1; 13:17; 14:17), ಬಾಬೆಲಿನವರ ಆಕ್ರಮಣದಿಂದ ಉಂಟಾಗುವ ನ್ಯಾಯತೀರ್ಪಿನ ಕುರಿತಾದ ಅವನ ಭವಿಷ್ಯವಾಣಿಗಳ ನಿಮಿತ್ತ ಸಂಘರ್ಷಯಾತನೆಯ ಜೀವನವನ್ನು ನಡೆಸುತ್ತಿದ್ದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 626-570 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬೆಲಿನ ಸೆರೆವಾಸದ ಸಮಯದಲ್ಲಿ ಬಹುಶಃ ಇದನ್ನು ಪೂರ್ಣಗೊಳಿಸಿದಾದರೂ, ಪುಸ್ತಕದ ಸಂಪಾದನೆಯು ಅದಾದ ನಂತರವೂ ಮುಂದುವರೆದಿದೆ ಎಂದು ಕೆಲವರು ಪರಿಗಣಿಸಿದ್ದಾರೆ.
ಸ್ವೀಕೃತದಾರರು
ಯೆಹೂದದ ಮತ್ತು ಯೆರೂಸಲೇಮಿನ ಜನರು ಮತ್ತು ಸತ್ಯವೇದದ ಓದುಗಾರರೆಲ್ಲರು.
ಉದ್ದೇಶ
ಕ್ರಿಸ್ತನು ಭೂಮಿಗೆ ಬಂದಾಗ ದೇವರು ತನ್ನ ಜನರೊಂದಿಗೆ ಮಾಡಲು ಉದ್ದೇಶಿಸಿದ ಹೊಸ ಒಡಂಬಡಿಕೆಯ ಸ್ಪಷ್ಟ ನೋಟವನ್ನು ಯೆರೆಮೀಯನ ಪುಸ್ತಕವು ನಮಗೆ ಒದಗಿಸುತ್ತದೆ. ಈ ಹೊಸ ಒಡಂಬಡಿಕೆಯು ದೇವರ ಜನರ ಪುನಃಸ್ಥಾಪನೆಯ ವಿಧಾನವಾಗಿದೆ, ಹೇಗೆಂದರೆ ಆತನು ತನ್ನ ಧರ್ಮಶಾಸ್ತ್ರವನ್ನು ಅವರೊಳಗೆ ಇಡುವನು, ಕಲ್ಲಿನ ಹಲಿಗೆಗಳ ಬದಲಿಗೆ ಮಾಂಸದ ಹೃದಯದ ಮೇಲೆ ಬರೆಯುತ್ತಾನೆ. ಯೆಹೂದ್ಯರೊಂದಿಗಿನ ಅಂತಿಮ ಪ್ರವಾದನೆಯನ್ನು, ದೇಶದವರು ಪಶ್ಚಾತ್ತಾಪಪಡದಿದ್ದರೆ ಮುಂಬರುವ ನಾಶದ ಎಚ್ಚರಿಕೆಯನ್ನು ಯೆರೆಮೀಯನ ಪುಸ್ತಕವು ಉಲ್ಲೇಖಿಸುತ್ತದೆ. ಯೆರೆಮೀಯನು ದೇವರ ಕಡೆಗೆ ಹಿಂದಿರುಗುವಂತೆ ದೇಶಕ್ಕೆ ಕರೆ ನೀಡುತ್ತಾನೆ. ಅದೇ ಸಮಯದಲ್ಲಿ, ಯೆಹೂದವು ವಿಗ್ರಹಾರಾಧನೆ ಮತ್ತು ಅನೈತಿಕತೆಯಿಂದ ಪಶ್ಚಾತ್ತಾಪಪಡದ ಕಾರಣದಿಂದಾಗಿ ಅದರ ನಾಶದ ಅನಿವಾರ್ಯತೆಯನ್ನು ಯೆರೆಮೀಯನು ಗುರುತಿಸುತ್ತಾನೆ.
ಮುಖ್ಯಾಂಶ
ನ್ಯಾಯತೀರ್ಪು
ಪರಿವಿಡಿ
1. ಯೆರೆಮೀಯನಿಗೆ ದೇವರ ಕರೆ — 1:1-19
2. ಯೆಹೂದಕ್ಕೆ ಎಚ್ಚರಿಕೆಗಳು — 2:1-35:19
3. ಯೆರೆಮೀಯನ ಸಂಕಷ್ಟ — 36:1-38:28
4. ಯೆರೂಸಲೇಮಿನ ಪತನ ಮತ್ತು ಅದರ ಪರಿಣಾಮಗಳು — 39:1-45:5
5. ರಾಷ್ಟ್ರಗಳ ಬಗ್ಗೆ ಪ್ರವಾದನೆಗಳು — 46:1-51:64
6. ಐತಿಹಾಸಿಕ ಅನುಬಂಧ — 52:1-34